ಮಹಾತಾಯಿಗೆ ನಮನ..

 

ಸಾವಿರ ಪೆಟ್ಟು ಕೊಟ್ಟರು ನಾ ಬೀಳುವುದಿಲ್ಲವೆನುತ ಕೋಟಿ ಕೋಟಿ ಜನರ ಪೊರೆಯುತ್ತಿರುವ ಮುಂಬೈ ಎಂಬ ಮಹಾ ತಾಯಿಗೆ, ಏನೇ ಆಗಲಿ ಹೀಗೆ ಇರುವೆವು ಎಂದು ಮೊಗದಲ್ಲಿ ತುಂಬು ನಗೆಯ ಸೂಸುವ ಮುಂಬೈ ಮಹಾ ಜನತೆಗೆ ಕಣ್ತುಂಬಿ ನಮಿಸುತ್ತಾ ಅಗಲಿದ ಬಂಧುಗಳಿಗೆ ನಮ್ಮ ನಮನಗಳನ್ನು ಸಲಿಸೋಣ…

ಆರಿ ಹೋದವು
ನೂರು ದೀವಿಗೆಗಳು
ಕೋಟಿ ಕಂಗಳ ಬೆಳಕ ಕಾಯಲು
ಕರಗಿ ಹೋದವು
ಸಾವಿರ ಆಸೆಗಳು
ಕೋಟಿ ಭಾವಗಳ ಒಂದು ಮಾಡಲು

ಕೋಟಿ ಪ್ರಣಾಮಗಳು
ಆ ಬೆಳಕ ಕಾಯ್ದ
ಉಕ್ಕು ಕೈಗಳಿಗೆ
ಅನಂತ ನಮನಗಳು
ಆ ಬೆಳಕಿಗುಸಿರು ಹೊಯ್ದ
ಅಮರ ಜೀವಗಳಿಗೆ

ಧಿಕ್ಕಾರವಿರಲಿ
ನಡೆದಾಡುವ ಪಿಶಾಚಗಳು
ಮಾನವರಾದುದಕ್ಕೆ
ಧಿಕ್ಕಾರವಿರಲಿ
ಅವ ಪೊರೆದು ತಾ ಬದುಕುವ
ರಕ್ತ ಪಿಪಾಸುಗಳಿಗೆ

ಇನ್ನಾದರೂ
ಮೇಲೇಳುವ
ಈ ಹಾಳು ನಿದ್ದೆ ಸಾಕು ಮಾಡಿ
ಅಲ್ಲಿರುವ ಸ್ವರ್ಗವ
ಭೂಮಿಗಿಳಿಸುವ
ಒಂದೇ ಸಂಕಲ್ಪ ಮಾಡಿ

—ಗಣೇಶ :)

ಇಲ್ಲ ಬಿಡು…

ನಿನ್ನ ನಗೆ ನೆನಪು,
ನಿನ್ನ ಕೈ ಬಿಸುಪು,
ಕಳೆದ ಕವಿತೆ ಸಾಲು,
ಬರೆದ ಸವಿ ಸಮಯ,
ಜತೆ ನಡೆದ ಸಾಗರ ತೀರ,
ಸುಳಿವ ಹುಣ್ಣಿಮೆ ಗಾಳಿ,
ಈ ಎಲ್ಲದಕೂ
ನನ್ನೆರಡು ಕಣ್ಣ ಹನಿ ಕಾಣಿಕೆಯೇ…??
ಇಲ್ಲ ಬಿಡು…
ನನ್ನ ಪ್ರೀತಿ…
ನಿನ್ನ ನೆನಪು ಅಷ್ಟು
ಬಡವಲ್ಲ ಬಿಡು….

 —-

ನಿನ್ನ ನೆನಪು…

ನಿನ್ನ ನೆನಪು…
ಚಿಗುರು ಮಾವನ್ನರಸಿ
ಹೊರಡುವ
ಕೋಗಿಲೆಯ ಇಂಪು,
ಬಿರು ಬೇಸಿಗೆಯಲ್ಲಿ
ಅರ್ಧ ಸುರಿದ ಮಳೆ,
ಒಟ್ಟಿನಲ್ಲಿ ನನ್ನ ಮನದ
ನೆಮ್ಮದಿ ಕೆಡಿಸಿದ
ಸುಂದರ ಕನಸು… 

100_00822.jpg

 ಪುಟ್ಟಾ………

ಯಾಕೋ ತುಂಬಾ ಬೇಸರವಾಗ್ತಿದೆ ಕಣೆ. ಮಳೆಗಾಗಿ ಕಾದ ನೆಲ, ಮಳೆ ಬರದೆ ಇದ್ದಾಗ ಬಿಡುವ ನಿಟ್ಟುಸಿರನಷ್ಟು ತಾಪ ಒಳಗೆ ಸುಡ್ತಾ ಇದೆ. ಹೀಗೆ ಇದ್ದಕ್ಕಿದ್ದ ಹಾಗೆ ಕಾಡೋ ಖಿನ್ನತೆ ಜೊತೆಗೆ ನಿನ್ನ ನೆನಪೂ ಸೇರಿಬಿಟ್ರೆ, ಥೂ… ಇದೂ ಒಂದು ಬದುಕಾ….?? ಅನ್ಸಿಬಿಡುತ್ತೆ ಕಣೆ. ಆ ಬೇಗೆ ಯಾರ್ಗೂ ಬೇಡ ಕಣೆ. ನಿನ್ನ ನೆನಪೋ, ಅದೂ ಹೊತ್ತಲ್ಲದ ಹೊತ್ತಲ್ಲಿ ಬರುತ್ತೆ. ಕಡಲಿಗಾದ್ರೂ ತೀರ ಮೀರದ ಸಂಯಮ ಇರುತ್ತೆ, ನಿನ್ನ ನೆನಪಿಗೆ ಅದೂ ಇಲ್ಲ. ಯಾವಾಗಲಾದರೂ ಸರಿ ಬೇಡದ ಅತಿಥಿ ಮನೆಗೆ ಬಂದ ಹಾಗೆ, ಬಂದ ಮೇಲೆ ಅವನು ಹೊರಡುವಾಗ ಏನೋ ಮರೆಯದ ಬೇಸರ ಉಳಿಸಿ ಹೋಗ್ತಾನಲ್ಲ ಹಾಗೆ. ಯಾಕೇ ನನ್ನ ಇಷ್ಟು ಕಾಡಿಸ್ತಿ ..? ಪಾಪಿ, ನೀನು ಎದುರು ಬಂದಾಗ ಆಡೋ ಮಾತೆಲ್ಲಾ ಎಲ್ಲೋ ಮಾಸ್ತರರ ಹೆದರಿಕೆಗೆ ಬೆದರಿದ ಹುಡುಗರ ಹಾಗೆ ಗಂಟಲ್ಲಲ್ಲೇ ಉಳಿದು ಹೋಗ್ತವೆ. ಅದಾವ ಮಾಯೆಯೇ ನಿಂದು….? ನಿನ್ನ ನೋಡ್ತಿದ್ದ ಹಾಗೆ ಎಲ್ಲಾ ಮರೆತು ನಿನ್ನ ಮುಖ ನೋಡ್ತಾ ಹಾಗೇ ಇಡೀ ದಿನ ಕೂತ್ಕೊಂಡ್ ಬಿಡ್ಬೇಕು ಅನ್ಸುತ್ತೆ. ನಿನ್ನನ್ನ ವಾಚಾಮಗೋಚರವಾಗಿ ಬಯ್ಬೇಕು ಅಂದ್ಕೊಂಡಿರೋ ನಾಲಿಗೆಗೂ ಅದು ಮರೆತು ಹೋಗಿ ನಿನ್ನನ್ನ ಹೊಗಳ್ತಾ ಹೊಸಾ ಕವನ ಕಟ್ಟುತ್ತೆ.

ಪುಟ್ಟಾ , ಒಂದಂತೂ ಹೇಳ್ತೀನಿ ಪ್ರಪಂಚದಲ್ಲಿ ಯಾರೂ ನಿನ್ನನ್ನ ನನ್ನಷ್ಟು ಪ್ರೀತ್ಸೋಕೆ ಸಾಧ್ಯಾನೆ ಇಲ್ಲಾ ಕಣೆ. ಯಾಕಂದ್ರೆ ನನ್ನ ಮೊದಲ ಪ್ರೀತಿ ನೀನೆ ಕಣೆ. ಮೊದಲ ಪ್ರೀತಿಗೂ, ಮೊದಲ ಮಗುವಿಗೂ ಯಾವುದೇ ವ್ಯತ್ಯಾಸವಿಲ್ಲ ಕಣೆ. ಬೇಕಾದ್ರೆ ಯಾರಾದ್ರೂ ತಾಯಿನೇ ಕೇಳು ಮೊದಲ ಮಗುವಿನ ಪುಳಕ ಹೇಗೆ ಅಂತ. ನೀನೊಂತರಾ ಮರೆತೂ ಮರೆಯದ ಹಾಡು, ಮನಸ್ಸು ಪ್ರಜ್ನೆ ತಪ್ಪಿದ್ರೂ ಗುನುಗೋ ಹೆಸರು. ಪಾಪಿ ನಿಂಗ್ಯಾವಾಗ ನಾನು ಅರ್ಥ ಆಗ್ತಿನೋ..? ನೀನ್ಯಾವಾಗ ನನ್ನ ಬೆಳಕಾಗ್ತೀಯೋ…? ಕಾಯ್ತಾ ಇದ್ದೀನಿ ಕಣೆ ಆ ದಿನಕ್ಕೋಸ್ಕರ. ಆ ದಿನ ನನ್ನ ಬದುಕಿನ ಕಡೇ ದಿನ ಆದ್ರೂ ಸರಿ ಕಾಯ್ತಾ ಇರ್ತೀನಿ.. ಮರೀಬೇಡ….

ಇಂತಿ ನಿನ್ನ ಪ್ರೀತಿಯ,

……………………………………..

ಹೆಸ್ರು ಬೇರೆ ಬರೀಬೇಕ..?? ನಿನ್ನ ಮನಸನ್ನೇ ಕೇಳು.. ಅದು ಹೇಳುತ್ತೇ…..

—- ಗಣೇಶ…. :)

ಹುಡುಗೀ….

ಹುಡುಗಿ…
ನೀನು ಕವಿಯ ಮನಸು,
ನಾ ಬರೆದಿಟ್ಟ ಕನಸು,
ಮುಚ್ಚಿಟ್ಟ ಕವಿತೆ,
ಚಿಮ್ಮುವ ಭಾವದ ಒರತೆ,
ಯಾರೋ ಬರೆದು
ಹಾಡಲು ಮರೆತ
ಪ್ರೇಮ ಗೀತೆ….

…… ಗಣೆಶ… :)

ನೀನು…

ನೆನಪಾಗಿ ಕಾಡಿದವಳು,
ಕಳೆದಿರುಳ ಕನಸೊಳಗೆ..
ಕಾಡಿದೆ ನಿನ್ನ ನೆರಳು,
ನನ್ನ ಬಾಳ ಪಥದೊಳಗೆ..

ಕಣ್ಣೊಳಗೆ ಕೂತ ಕನಸಿಗೆ,
ನೂರು ಬಣ್ಣ ಕೊಟ್ಟವಳು..
ಮನದೊಳಗೆ ಅವಿತ ಪದಕೆ
ಕವಿತೆ ಹೆಸರ ಇಟ್ಟವಳು..

ಬರಿದಾದ ಎದೆ ಕಾಗದದಿ,
ಒಲುಮೆ ಹಾಡ ಬರೆದವಳು..
ಮೌನದ ನೀರವತೆಗೆ,
ಸಂಗೀತ ಕಲಿಸಿದವಳು..

ನಗುತ ನೀ ನಿಂತಾಗ
ತೊಲಗಿತು ಆ ಕಾರಿರುಳು..
ನೀನಿಲ್ಲದೆ ನರಳಿದೆ ನೋಡು,
ಹುಣ್ಣಿಮೆ ಚಂದಿರನಿರುಳು..

ಎದೆ ನೋವ ಮರೆಸುವ ನೆವದಿ,
ಮಧುರವಾಗಿ ಕೊಲುವವಳು..
ಜತನವಾಗಿಟ್ಟ ಕನಸ,
ಕೇಳಿ ನಗೆಯಾಡುವವಳು..

ಇನ್ನೇನು ಬಣ್ಣಿಸಲಿ ನೀ ಹೇಳು…??

— ಗಣೇಶ… :-)

ನೀನು ಬಿಟ್ಟ ಮೇಲೆ…

ನೀನು ಬಿಟ್ಟ ನನ್ನ ಬದುಕು,
ಆಗಿದೆ ನೋವಿಗೆ ನಿಲ್ದಾಣ.
ತುಂಬಿ ಸುರಿವ ಕಣ್ಣ ಹನಿಗೆ,
ಪಾಪ, ಗುರಿಯಿರದ ಪಯಣ.

ಕೊರೆವ ಹಾಡಾದ ನಿನ ನೆನಪು,
ಕೊಲುತಿದೆ ಮನವ ಪ್ರತಿಕ್ಷಣ.
ಮುರಿದ ಎದೆ ಮನೆಯೊಳಗೆ,
ನಗುತಿದೆ ಕಾಲ್ಮುರಿದ ಕವನ.

ಒಲವಿರದ ಮನದ ಮುಗಿಲಲಿ,
ಬತ್ತಿದೆ ನೂರು ಕನಸು.
ಕನಸ ಹನಿಗೆ ಕಾದ ಜೀವಕೆ,
ಬಂದಿದೆ ನನಮೇಲೆ ಮುನಿಸು.

ಯಾರೋ ಗುರಿಯಿರದೆ ಬಿಟ್ಟ ಬಾಣ,
ಬಂದು ನಾಟಿದೆ ನನ್ನೆದೆಯ.
ಸುರಿವ ಪ್ರೀತಿ ನೆತ್ತರ ಕಂಡು,
ಕೆಂಪೆಂದು ಕುಣಿದಿದೆ ನನ ಹೃದಯ.

ಮಗುವ ನಗುವಾದ ನಿನ್ನೊಲವಿಗೆ,
ಇಷ್ಟು ಕೋಪ ಕಲಿಸಿದವರಾರು.
ಎಚ್ಚರ ಇಲ್ಲದ ನನ ಮನವ,
ಮತ್ತೆ ಎಚ್ಚರಿಸುವರಾರು.

ಬರಿದೆ ಪದವಲ್ಲದ ಈ ಹಾಡ,
ನೀ ಬಂದು ಕೇಳುವುದೆಂದು.
ಮತ್ತೊಮ್ಮೆ ಮಿನುಗಲಿ ನಿನ್ನ ನಗೆಯು,
ನನ್ನ ಮನದ ಮುಗಿಲಲಿ ಇಂದು.

—- ಗಣೇಶ…. :-)

ನಿನ್ನ ನಗೆಯೊಲವು…

ನಿನ್ನ ನಗೆಯೊಲವಿಂದ
ಮುದುಡಿದ ಹೂ ಅರಳಿತು
ಮತ್ತೊಮ್ಮೆ ಮಧುರವಾಗಿ ಮಡಿಯಲು..

ಓಡುತ್ತಿದ್ದ ಚಂದಿರ ಕೂಡ
ಅಲ್ಲೇ ನಿಂತ
ನಿನ್ನ ನಗೆ ಬೆಳಕಲ್ಲಿ ತಾನೂ ಮೀಯಲು..

ನಿನ್ನ ನಗೆ ಮುಗಿಲ ಮಳೆಯಿಂದ
ಮತ್ತೆ ಚಿಗಿತ ಜೀವಕ್ಕೆ
ಇನ್ನೇನು ಬೇಕು ?
ನೂರು ಜನ್ಮದ ಬರ ಕಳೆಯಿತು ಬಿಡು,
ನಿನಗೆ ಧನ್ಯವಾದ…

— ಗಣೇಶ… :-)

ಯಾಕೋ ತಿಳಿಯುತ್ತಿಲ್ಲ….

ಸುರಿವ ಮಳೆಯಲ್ಲಿ ನಿನ್ನ ನೆನಪಾಗುತ್ತಿದೆ
ಯಾಕೋ ಗೊತ್ತಿಲ್ಲ.
ಮಳೆಯ ಹನಿಗಳ ಜತೆ ನನ್ನ ಕಂಬನಿಯೂ ಹರಿಯುತ್ತಿದೆ..
ಸಂತೋಷಕ್ಕೋ..? ವಿಷಾದಕ್ಕೋ..?
ತಿಳಿಯುತ್ತಿಲ್ಲ..

ಹೀಗೆ ನಿನ್ನ ನೆನೆಸಿಕೊಂಡು ಬರೆಯುತ್ತೇನೆ,
ಬರೆದು ನಿರಾಳವಾಗುತ್ತೇನೆ,
ನಿನ್ನ ನೆನಪಾದ ಸಂತೋಷಕ್ಕೋ ?
ಬರೆದು, ಭಾವದ ಬಸಿರು ಕಳಕೊಂಡ ನೆಮ್ಮದಿಗೋ ?
ತಿಳಿಯುತ್ತಿಲ್ಲ..

ಬೆಳದಿಂಗಳು ಕಂಡಾಗ ನಿನ್ನ ನಗು ನೆನಪಾಗುತ್ತದೆ,
ನಿನ್ನೊಡನೆ ಕೂತು ಚಂದಿರನ ಗೇಲಿ ಮಾಡಿದ್ದು ನೆನಪಾಗುತ್ತದೆ,
ಹಾಗೆಯೇ ನನ್ನ ಕಣ್ಣು ತುಂಬುತ್ತದೆ
ನಿನ್ನ ನಗೆ ನೆನಪು ಕೊಟ್ಟ ನೋವಿಗೋ ?
ಹೊಳೆವ ಚಂದಿರನ ದಿಟ್ಟಿಸಿದ್ದಕ್ಕೋ ?
ತಿಳಿಯುತ್ತಿಲ್ಲ..

ನೀನು ಬೆನ್ನು ತಿರುಗಿಸಿ ಹೋದ ಹಾದಿ ಹಿಡಿಯುತ್ತೇನೆ,
ನಿನ್ನ ಹೆಜ್ಜೆ ಗುರುತು ಅರಸುತ್ತೇನೆ,
ಯಾಕೋ ಕಾಲ್ಗಳು ಭಾರವಾಗಿ ನಿಲ್ಲುತ್ತವೆ,
ನಿನ್ನ ಹೆಜ್ಜೆ ನೋಡಿದ ಸಂತಸಕ್ಕೋ ?
ನಿನ್ನ ಹಾದಿಗುಂಟ ನಡೆದ ಆಯಾಸಕ್ಕೋ ?
ತಿಳಿಯುತ್ತಿಲ್ಲ..

ನಿನ್ನ ನೆನೆಸಿಕೊಳ್ಳಬಾರದೆಂದುಕೊಳ್ಳುತ್ತೇನೆ
ಆದರೂ ನೆನೆಸಿಕೊಳ್ಳುತ್ತೇನೆ
ನಿನ್ನ ಮರೆಯಬೇಕೆನ್ನುವುದಕ್ಕೋ ?
ನಿನ್ನ ನೆನಪು ಕಳೆಯಬಾರದೆನ್ನುವುದಕ್ಕೋ ?
ತಿಳಿಯುತ್ತಿಲ್ಲ..

                                            — ಗಣೇಶ… :-)

ಮತ್ತೊಮ್ಮೆ ಕುಳಿತ್ತಿದ್ದೇನೆ….

Paapi

ಮತ್ತೊಮ್ಮೆ ಕುಳಿತ್ತಿದ್ದೇನೆ
ನಿನ್ನ ಬಣ್ಣಿಸಲೆಂದು,

ಬೆಳಗಿನೋಕುಳಿಯಲ್ಲಿ ಮೆರೆವ
ದಿಗಂತದ ಚೆಲುವ ಕೆಂಪು,
ಗರಿಕೆ ತುದಿಯಲಿ ಕುಳಿತ
ಹನಿ ಇಬ್ಬನಿಯ ಹೊಳಪು,

ಸುರಿ ಮಳೆಯ ಹನಿಗಳೆದೆಯಲ್ಲಿ
ನಿನ್ನದೇ ಹೆಸರು,
ನಕ್ಕು ನಲಿವ ಹೂಗಳೆದೆ ಕಂಪಿಗೆ
ನಿನ್ನದೇ ಉಸಿರು,

ಸುರಿವ ಕಪ್ಪು ಕಾರಿರುಳಿಗೆ
ನಿನ್ನ ನಗೆ ಬೆಳಕು,
ನೀಲಿ ಬಾನ ಒಂಟಿ ಚಂದ್ರಮಗೆ
ನಿನ್ನ ಕಂಗಳದೇ ಸೆಳಕು

ಕನಸು ಕಾಣುವ ಎದೆ ತಿದಿಗೆ ಜೀವ
ನಿನ್ನದೇ ಉಸಿರು,
ಮರೆತಾದರು ಸರಿ ನಿನ್ನೆದೆಯೊಲೊಮ್ಮೆ
ಬರೆದು ಬಿಡು ನನ್ನ ಹೆಸರು…

— ಗಣೇಶ… :-)

ಪಾಪಿ, ಇಷ್ಟೆಲ್ಲಾ ಬರೆಯೋಕೆ ಸ್ಪೂರ್ತಿಯಾಗ್ತಿ, ಜೀವ ಅನ್ನಿಸ್ತಿ, ಮತ್ತೇನೋ ಹೇಳ್ಬೇಕು ಅನ್ನೊಷ್ಟರಲ್ಲಿ ಕನಸು ಕರಗಿಸಿ ಮರೆಯಾಗಿ ಬಿಡ್ತಿ. ನಿನ್ನ ಜತೆ ಕಡಲತೀರದಗುಂಟ ಬರಿದೇ ಕಾಲಲ್ಲಿ ಒಂದಷ್ಟು ದೂರ ಹಾಗೆ ನಡ್ಕೊಂಡು ಹೋಗೋ ಆಸೆ ಇದೆ, ಒಂದು ಬೆಳದಿಂಗಳಿರುಳು ಪೂರಾ ನಿನ್ನ ನಗು ನೋಡ್ತಾ ಚಂದ್ರನ್ನ ಗೇಲಿ ಮಾಡ್ತಾ ಚುಡಾಯಿಸೋ ಆಸೆ ಇದೆ, ಮತ್ತೆ ಆಡಿದರೂ ಮುಂದಿನ ಜನ್ನಕ್ಕೂ ಮುಗಿಯದಷ್ಟು ಮಾತಿದೆ, ಅದನ್ನೆಲ್ಲಾ ನಿಂಜೊತೆ ಆಡ್ಬೇಕನ್ನೋ ಆಸೆ ಇದೆ, ಹೇಳ್ಕೊಳ್ಳೊಕೆ ಆಗ್ದೇ ಇರೋಷ್ಟು ತುಡಿತ ಇದೆ, ಇನ್ನೂ ತುಂಬಾ ಆಸೆ ಇದೆ ಅದಕ್ಕೆ ಒಂದು ಜನ್ಮ ಸಾಲ್ದು ಬಿಡು ಆದ್ರೂ ಈ ಜನ್ಮದಲ್ಲೇ ಅಷ್ಟೂ ಜನ್ಮದ ಬದುಕನ್ನ ನಿಂಜೊತೆ ಬದುಕ್ಬೇಕು ಅನ್ನೋ ಆಸೆ ಇದೆ……. ಯಾವಾಗ್ ಸಿಗ್ತಿ ಹೇಳು……???

ಇದು ಪ್ರೀತಿಯೆಂದರೆ …

ನಿನ್ನ ಕಣ್ಣ ಕೊಳದ ಬೆಳಕಿನಿಂದ
ನನ್ನ ಬೊಗಸೆ ತುಂಬಿದವಳು ನೀನು…
ಎದೆಯೊಳಗೆ ದೀಪವಿಟ್ಟು, ಬೆಳಕ ಚೆಲ್ಲಿ
ನಗೆ ತೋಟ ಅರಳಿಸಿದವಳು ನೀನು…
ನಿನ್ನ ಬಾಳ ನಗುವಾಗುವಾಸೆ…
ಇದು ಪ್ರೀತಿಯೆಂದರೆ ಇರಲಿ ಬಿಡು ಈ ಪ್ರೀತಿ
ನಿನ್ನ ಕಣ್ಣ ಕೊಳದ ಹೂವಾಗಿ…

                                                — ಗಣೇಶ.

ನೀ……

ನೀ…… 

ಮಿಂಚಿ ಬೆಳಕಾದವಳು,
ಎದೆ ಗೂಡೊಳಗೆ ಕೂತು
ಕನಸ ಸದ್ದಾದವಳು,
ಒಳಗಿನ ಸಿಹಿ ಬೇಗುದಿಗೆ
ಕುಲುಮೆ ಬೆಂಕಿಯಾದವಳು,
ಮಧುರ ಯಾತನೆ ?
ಅಲ್ಲ ಬಿಡು
ಎದೆಯ ನೋವಿಗೆ
ಮದ್ದಾದವಳು….

                                —ಗಣೇಶ

ನಿನ್ನ ಪ್ರೀತಿಗೆ…

ಕೆ.ಎಸ್.ನ ರ ” ನಿನ್ನ ಪ್ರೀತಿಗೆ.. ಅದರ ರೀತಿಗೆ.. ಕಣ್ಣ ಹನಿಗಳೆ ಕಾಣಿಕೆ “ ಈ ಅದ್ಭುತ ಸಾಲಿನಿಂದ ಪ್ರೇರಿತಗೊಂಡು…. sona.JPG 

ನಿನ್ನ ಪ್ರೀತಿಗೆ, ಅದರ ರೀತಿಗೆ,
ನನ್ನ ಜೀವವ ಪೊರೆದ ಒಲುಮೆಗೆ,
ಮನಕೆ ಹಾಡನು ಕಲಿಸಿದಾತ್ಮಕೆ,
ನನ್ನ ಭಾವದ ಕಾಣಿಕೆ.

ರೆಕ್ಕೆ ಮುರಿದ ಮನದ ಹಕ್ಕಿಗೆ
ಆಸೆ ನೂರರ ಗೂಡು ಕಟ್ಟುವ
ಬಲವ ತಂದ ಜೀವದಾಯಿಗೆ
ನನ್ನ ತನುವಿನ ಕಾಣಿಕೆ.

ಕಂಡ ಕನಸನು ಕೂಡಿದಂತ,
ಅದಕೆ ಒಲವನು ನೀಡಿದಂತ
ನಿನ್ನ ಜೋಡಿ ಕಂಗಳಿಗೆ
ಕಣ್ಣ ಬೆಳಕೇ ಕಾಣಿಕೆ.

ಒಂಟಿ ದನಿಯ ಹಾಡಿಗಿಂದು
ಯುಗಳವಾಗಿ ಜತೆಗೆ ಬಂದು
ಬದುಕ ಗೀತೆ ಹಾಡಿದ ದನಿಗೆ
ನನ್ನ ಮಾತೇ ಕಾಣಿಕೆ.

ನಿನ್ನ ಪ್ರೀತಿಯ ಬಿಂದುವಿಂದ
ಎನ್ನ ಸಾಗರ ಮಾಡಿದಂತ
ನಿನ್ನ ಒಲುಮೆಯ ಚಿಲುಮೆಗೆ
ನನ್ನ ಪ್ರೇಮವೇ ಕಾಣಿಕೆ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಏನ ಕೊಡಲಿ ಕಾಣಿಕೆ…??
ನಿನ್ನ ಎದುರು ಬಡವ ನಾನು
ಕೊಡುವೆ ನನ್ನನೇ ಕಾಣಿಕೆ….
                     

                      —- ಗಣೇಶ

ಮೀರಾ….

ಅಬ್ಬಾ ಅಂತೂ ಬಂದೆಯಲ್ಲಾ… ಕನಸಿನಲ್ಲಾದರೂ..
ರಾಮನ ಶಬರಿಯಂತೆ ಕಾದಿದ್ದೂ ಸಾರ್ಥಕವಾಯ್ತು..
ಎಲ್ಲಿದ್ದೆ ಇಷ್ಟು ದಿನ..??
ಎಂದು ಕೇಳೆನು ಬಿಡು..
ನಿನಗೋ ನೂರೆಂಟು ಸಂಬಂಧ… ನನಗೆ ನೀನೊಬ್ಬನೆ..

ಹಾಡುತ್ತಿದ್ದೆ..
ಆ ಹಾಡಿನಲಿ ನೀನಿರುತ್ತಿದ್ದೆ ಗೀತವಾಗಿ..
ಈಗಲೂ ಹಾಡುತ್ತೇನೆ … ನೀನಿರುತ್ತೀ ಕಾಡುವ ನೆನಪಾಗಿ…
ಹುಣ್ಣಿಮೆಯಲ್ಲಿ ತುಂಬು ಚಂದಿರ ಕಾಣುತ್ತಿರಲ್ಲಿಲ್ಲ ನನಗೆ.. ಪಕ್ಕದಲ್ಲಿ ನೀನಿದ್ದೆಯಲ್ಲಾ…
ಈಗಲೂ ಕಾಣುತ್ತಾನೆ ತುಂಬು ಚಂದಿರ… ಆದರೇಕೊ ಅವನಲ್ಲಿ ಕಲೆಗಳಿವೆ…

ನೀ ಬಿಟ್ಟು ಹೋದೆಯಲ್ಲಾ ನನ್ನ ನೆನಪಾಗಲಿಲ್ಲವೇ ನಿನಗೆ..??
ಹೋ.. ನಿನಗೆ ನಿನ್ನದೇ ಆದ ಕೆಲಸಗಳು… ನಾನೆಲ್ಲಿ ನೆನಪಿರುತ್ತೇನೆ ಹೇಳು..
ಅತ್ತೂ ಅತ್ತೂ ಕಣ್ಣೀರು ಸುರಿಸಿ ಕಲೆಯಾಗಿದೆ..
ಇಲ್ಲ ಯಾವ ಗಂಗೆಯೂ ತೊಳೆಯಲಾರಳು ಈ ಕಲೆಯ..
ಯಾಕೆಂದರೆ ಅತ್ತಿದ್ದು ಹೃದಯ..

ಹೇಗಿದ್ದೀಯೆಂದು ಕೇಳೆನು ಬಿಡು.. ನನಗೆ ಗೊತ್ತು ನೀ ಸೌಖ್ಯವಿಲ್ಲೆಂದು..
ನನ್ನ ಬಿಟ್ಟು ಹೋದ ಅಪರಾಧಿ ಭಾವ ನಿನ್ನ ಕುಟುಕುತ್ತಿದೆಯೆಂದು..
ನನ್ನ ಕಂಡಾಗಲಾದರೂ ನೆನೆಯುತ್ತೀಯಲ್ಲಾ ಹಳೆ ನೆನಪ.. ಇದು ಕನಸಾದರು ಸಹ..
ಅಷ್ಟು ಸಾಕು ಬಿಡು ಇನ್ನೊಂದು ನೂರು ವರುಷ ಬದುಕಿ ಬಿಡುತ್ತೇನೆ…
ಅದೇ ಖುಷಿಯಲ್ಲಿ…

ಬಂದಿರುವೆಯಲ್ಲಾ ಒಮ್ಮೆ ನುಡಿಸು ನಿನ್ನ ಕೊಳಲು..
ಸ್ವಲ್ಪ ಹೊತ್ತಿಗಾದರು ಮರೆಯುತ್ತೇನೆ ನನ್ನೆಲ್ಲ ಅಳಲು..
ಏನು ಕನಸೆಂದೆಯಾ…? ನಿನಗೇನು ಗೊತ್ತು ಇವೇ ನನ್ನ
ಜೀವ ಉಳಿಸುವ ಔಷದಿ ನೀ ಬಿಟ್ಟು ಹೋದಂದಿನಿಂದ..
ಒಮ್ಮೆಯಾದರು ನುಡಿಸೋ… ಅದರ ನಾದದಲ್ಲಿ ಕರಗುತ್ತೇನೆ..
ಕರಗಿ ನದಿಯಾಗಿ ನೀನೆಂಬ ಸಾಗರವ ಸೇರುತ್ತೇನೆ…

ಏನಿದು ಕಲರವ..? ಹೋ.. ಬೆಳಕು ಹರಿಯುತ್ತಿರಬೇಕು…
ಯಾವುದೋ ಹಕ್ಕಿ ಕೂಗುತ್ತಿದೆ ನಾ ಏಳಬೇಕು..
ನಿನ್ನದೇ ಸಾವಿರ ನೆನಪುಗಳಿವೆ ಅವನ್ನೆಲ್ಲಾ ನಾ ಹಾಡಬೇಕು..
ಇನ್ನು ಏಳುತ್ತೇನೆ.. ಒಂದು ಸುಂದರ ಕನಸು ಕೊಟ್ಟಿದ್ದಕ್ಕೆ ನಿನಗೆ ನಾನು ಋಣಿ..
ಮತ್ತೆ ಇಂದು ಬರುತ್ತೀ ತಾನೆ ಕನಸಿನಲ್ಲಿ…
ಕೊಂಚ ಬೇಗ ಮಲಗುತ್ತೇನೆ… ಉದ್ದದ ಕನಸಾದರೂ ಸಿಗಲಿ…

— ಗಣೇಶ

ನಿನ್ನ ನೆನೆಯುತ್ತಾ……..

ನೀನು..
ಎದೆಯ ಕದಬಡಿದು
ಅವಿತು, ಆಟವಾಡಿಸಿ,
ಮತ್ತೆ ನಿಧಿಯಂತೆ ಸಿಕ್ಕಿ,
ಮಗುವಿನಂತೆ ಜೋತುಬಿದ್ದ
ಮುದ್ದು ಪಾಪಿ….
____________________________________________________

ನಿನ್ನ ನೆನಪು
ನಟ್ಟಿರುಳು ಸುರಿವ ಮಳೆ,
ಸವಿನಿದ್ದೆಯಿಂದೆಬ್ಬಿಸಿ,
ಶತಪಥ ತಿರುಗಿಸಿ,
ಮತ್ತೆ ಮುಂಜಾನೆ ಸೆಳೆವ ಮಂಪರು….

______________________________________________________________________________

ಅಬ್ಬಾ……!!
ನೀನು ಬಂದದ್ದೇ ತಿಳಿಯಲಿಲ್ಲ,
ಕಳ್ಳಬೆಕ್ಕಿನ ಹೆಜ್ಜೆಯಿಟ್ತು
ಒಳಬಂದಿದ್ದೆ ತಿಳಿಯಲಿಲ್ಲ,
ಮಾತು, ಮೌನ,
ಎದೆಯ ಭಾವಗಳ ಮೊರೆತ,
ನೆನಪುಗಳ ಮಿಡಿತ,
ಎಲ್ಲವನ್ನೂ ಮರೆತಂತಿದ್ದೆ ನಾನು,
ಅಷ್ಟರಲ್ಲಿ ಬಂದೆ ಸದ್ದಿಲ್ಲದ ಮಳೆಯಂತೆ,
ಪ್ರೀತಿಯ ಕದ ಹಾಕಿದ್ದೇನೆ ಹೊರ ಹೋಗದಂತೆ,
ಇನ್ನು ನನ್ನೆದೆ ಮನೆಯೊಳಗೆ,
ಮಳೆಯ ಸದ್ದು ನಿಲ್ಲುವುದಿಲ್ಲ….

ಮತ್ತೆ ನೆನಪಾದೆ……

ಮತ್ತೆ ನೆನಪಾದೆ..
ಎದೆಗೆ ತುಂತುರು ಮಳೆಯಾದೆ….

ಮನ ಸಂತಸದ ಗೂಡಾಗಿದೆ
ಗರ್ಭದೊಳಗಣ ಮಗು ತಿರುವಿದಂತೆ.
ಕಂಡಿದ್ದ ಕನಸಿನ ಬೆಳಕ ಮಿಂಚು
ಮತ್ತೆ ಕಣ್ಮುಂದೆ ಸುಳಿದಿದೆ..

ಅರ್ಧ ಕಟ್ಟಿದ್ದ ಕನಸೀಗ
ಕೈ ಬೀಸಿ ಕರೆದಂತಾಗಿದೆ.
ಎಲ್ಲಿಗೋ ನಿಲ್ಲಿಸಿದ್ದ ಕವನವೀಗ
ಸೆಳೆದಂತಾಗಿದೆ..

ಮತ್ತೂ ಘಮ ಘಮಿಸುವಾಸೆ
ಅರಳಿದ ಮನದ ಕಂಪು ನೀನು.
ಎತ್ತರೆತ್ತರವ ಮುಟ್ಟುವಾಸೆ
ಚಿಮ್ಮುವ ಸೆಲೆಯ ಜೀವ ನೀನು..

ಮತ್ತೆ ಮರುಹುಟ್ಟು ಸುಳ್ಳೆಂದಿದ್ದೆ
ಅದ ಸುಳ್ಳಾಗಿಸಿದೆ ನಿನ ನೆನಪು.
ಮತ್ತೆ ಜೀಕಿ ಬದುಕುವಾಸೆ
ಮನ ಕೇಳಿದೆ ನಿನ್ನ ಕೈಯ್ಯ ಬಿಸುಪು..

— ಗಣೇಶ….

ಮನಸ್ಸೇ ಹೀಗೆ……!!!

ಮನಸ್ಸೇ ಹಿಗೆ..!!
ಹುದುಗು ಬಂದ ಮೊಳಕೆಯ ಹಾಗೆ..
ಚಿಗುರುವುದೋ, ಮುರುಟುವುದೋ
ಎಂಬ ಜಿಜ್ಣಾಸೆಯಲ್ಲಿ
ಬೆಳೆದದ್ದೇ ತಿಳಿಯುವುದಿಲ್ಲ……..!!!!!!!!
— ಗಣೇಶ

ಬಯಕೆ………..

ನಡೆದ ಹಾದಿ ತುಂಬೆಲ್ಲಾ ಮರಳು,
ನಡೆದ ಗುರುತೇ ಸಿಗುತ್ತಿಲ್ಲ………
ಅಲ್ಲೊಂದು ಹೆಜ್ಜೆ, ಇಲ್ಲೊಂದು ಹೆಜ್ಜೆ,
ನನ್ನದೋ…..? ನನ್ನ ಕೈ ಹಿಡಿದು ನಡೆಸಿದ ನಿನ್ನದೋ…..?
ಯಾರೋ ಅದನ್ನು ಹಿಂಬಾಲಿಸುತ್ತಿದ್ದಾರೆ….
ಹೀಗೆ ಕಳೆದು ಹೋಗುವಾಸೆ,
ಗುರುತು ಯಾರದ್ದೆಂದು ತಿಳಿಯುವ ಮುನ್ನ…..
ಬೀಸುವ ಬದಲಾವಣೆಗೆ ಹೆಜ್ಜೆ ಅಳಿಯುವ ಮುನ್ನ…..

— ಗಣೇಶ

ಎಂದೋ ಮರೆತ ಹಾಡು ಮತ್ತೆ ನೆನಪಾಗಿಹುದು………

ತಿರುತಿರುಗಿ ಬರುವ ಪ್ರವಾಹದಂತೆ
ವರುಷ ವರುಷ ಬಂದರೂ ಮಳೆ ಹೊಸಜೀವ ತರುವಂತೆ
ಎಲೆಯಿಲ್ಲದ ಬೋಳು ಮರ ಮತ್ತೆ ಚಿಗಿತಂತೆ
ಎದೆಯೊಳಗಿನ ಸವಿ ನೆನಪುಗಳಿಗೆ ಜಡ ಬಿಡಿಸಿದಂತೆ
ನಾ ಎಂದೋ ಮರೆತ್ತಿದ್ದ ಹಾಡು ಮತ್ತೆ ನೆನಪಾಗಿಹುದು..

ಮನದ ಬೇಗುದಿಗಳಿಗೆಲ್ಲ ಈಗ ತಣ್ಣೀರ ಸ್ನಾನ
ಹಳೆ ಮಣ್ಣೇ ಹೊಸ ಮಳೆಗೆ ಹೊಸ ಕಂಪು ತಂದಂತೆ
ಗುರಿಯಿರದೆ ಅಂಡಲೆಯುತ್ತಿದ್ದ ಕನಸುಗಳಿಗೀಗ ಕೊಂಚ ನೆಮ್ಮದಿಯಂತೆ
ಅತ್ತಿತ್ತ ಹರಿಯುತ್ತಿದ್ದ ಭಾವಕ್ಕೆ ದಾರಿ ತೋರಿದಂತೆ
ನಾ ಎಂದೋ ಮರೆತ ಹಾಡು ಮತ್ತೆ ನೆನಪಾಗಿಹುದು..

ಹಾಡ ತುಂಬಾ ಬರಿಯ ಪ್ರಾಸದ ಸಂತೆ
ಸದಾ ಗುನುಗುತ್ತಿದ್ದರೂ ಬಾಯಿಗೆ ಬಂದಿರಲಿಲ್ಲ
ರಾಗ ಯಾವುದು ? ತಾಳ ? ಏನೋ ಒಂದೂ ನೆನಪಾಗುತ್ತಿಲ್ಲ
ಆದರೂ ಅಲ್ಲಲ್ಲಿ ಚೆಲ್ಲಿದ ಪದಗಳನು ಜೋಡಿಸಿ ಮನಸು
ಹಾಡುತಿದೆ ನಾ ಎಂದೋ ಮರೆತ್ತಿದ್ದ ಹಾಡು..

ಮರೆತ ಮೇಲೆ ಅದು ನೆನಪಾಗುವುದು ಹೇಗೆ ?
ಇದು ಬುದ್ಧಿಯ ಪ್ರಶ್ನೆ.
ಮರೆಯದಿದ್ದ ಮೇಲೆ ಅದ ನೆನಪೆನ್ನುವುದು ಹೇಗೆ ?
ಇದು ಮನಸ ಉತ್ತರ.
ಬುದ್ಧಿ ಮನಸುಗಳ ಈ ಪ್ರಶ್ನೋತ್ತರಕೆ ನಾನು ಮೂಕ..

ಮೂಕ ಭಾವನೆಗಳಿಗೆ ಕಣ್ಣ ದನಿಯಾಗಿಸಿ
ಜಾರುವ ಕಂಬನಿಯನು ಅದರ ಬರಹವೆಂದೆಣಿಸಿ
ಬದುಕನೊಂದು ವಿಷಾದ ಗೀತೆಯಾಗಿಸುವ ಸಿದ್ಧತೆಯಲ್ಲಿದ್ದಾಗ
ನಾ ಎಂದೋ ಮರೆತ ಹಾಡು ಮತ್ತೆ ನೆನಪಾಯಿತು
ಮನದ ಮೂಲೆಯಲೆಲ್ಲೋ ತಂಪು ಮಳೆಯಾಯಿತು..

— ಗಣೇಶ

ಹೇಳು ನೀನು…………

ನಿನ್ನ ಗಾಜುಕಂಗಳಲಿ ಕಂಡ ಬಿಂಬ ನಾನೇ ?
ಅದರ ಹಿಂದೆ ಕದಲುತ್ತಿದ್ದ ಬಣ್ಣ ಬಣ್ಣದ ಕನಸು ನನ್ನದೇನೆ ?
ನನ್ನ ಸೆಳೆದಾ ಕಣ್ಣು ನಿನ್ನದೇನೆ,
ಹೇಗೆ ಮರೆಯಲಿ ಅದನು ಹೇಳು ನೀನೆ ?

ಇರುಳು ಕವಿಯುವ ಹೊತ್ತು ಎದೆಯಲಿ
ಕದಲುವ ನೆನಪು ನೀನು
ಉರಿವ ದೀಪದೊಳು ಕಾಣ್ವ ಒಲುಮೆಯ
ಬಂಗಾರ ಜ್ವಾಲೆ ನೀನು

ಕವಿದ ಮುಸ್ಸಂಜೆಯಲಿ, ಕರೆವ ಏಕಾಂತದಲಿ
ಮನ ಕರೆವ ಮೆಚ್ಚಿನ ಹೆಸರು ನೀನು
ಮುಚ್ಚಿಟ್ಟು ತಿಂದ ನೆನಪುಗಳ ಬುತ್ತಿಯಲಿ
ಸವಿಯಾದ ಸಿಹಿಯ ನೆನಪು ನೀನು.

ಮುಚ್ಚಿಟ್ಟು ಬಚ್ಚಿಟ್ಟು ಒಪ್ಪ ಓರಣವಾಗಿಟ್ಟು
ಕಟ್ಟಿಕೊಳಲು ಕಂಡ ಬದುಕ ಕನಸು ನೀನು
ಕಪ್ಪಡರಿದ ಇರುಳಿನಲಿ ಬೆಳಕಿನ ಹೂವಾಗಿ
ಮೆಲ್ಲನೆ ಕಣ್ಬಿಟ್ಟ ತಾರೆ ನೀನು

ಮನದ ಮಲ್ಲಿಗೆಯಾಗಿ, ಅದರೊಳಗಣ ಕಂಪಾಗಿ,
ಒಲವೆದೆಯ ಮುಗಿಲಿನ ಬಣ್ಣದ ಬಿಲ್ಲಾದವಳು ನೀ,
ಎನ್ನೆದೆಗೆ ಮಳೆ ತರುವ ಮೋಡವಾದವಳು ನೀ,
ನಿನ್ನ ತೊರೆದು ಈ ಬದುಕು ಬದುಕಬಹುದೆ ನಾ.. ನೀನೆ ಹೇಳು ?

— ಗಣೇಶ

ಅಂದುಕೊಂಡದ್ದು, ಆದದ್ದು, ಸಿಕ್ಕಿದ್ದು…..

ಕೆಂಪು ಸೂರ್ಯ
ಹೊಳೆವ ನಕ್ಷತ್ರ
ತಂಪು ಚಂದಿರ
ನೀಲಿ ಆಗಸ
ಅಲ್ಲಿ ನಾವು ಸ್ವಚ್ಛಂದ ಬಾನಾಡಿ

ಬರಿದೇ ಕಲ್ಲು,
ಕಣ್ಣಿಗಡರುವ ಧೂಳು,
ಆಗೊಮ್ಮೆ ಈಗೊಮ್ಮೆ
ಚುಚ್ಚುವ ಮುಳ್ಳು,
ನಮ್ಮ ಕಣ್ಣಲ್ಲಿ ಹರಿವ ನೀರು.

ನೆನಪು
ನೆನಪು ನೆಂಚಿಕೊಳುವ ಮನಸು
ಮನಸ ತುಂಬಾ ತೀರದ ಆಸೆ
ಜೊತೆಗೊಂದು ಜೀವ
ಅದರ ಜೀವದ ಜತೆ ತಳುಕಿಕೊಂಡ
ನಮ್ಮ ಜೀವನ.

ಮೊದಲೆನೆಯದು ನಮ್ಮ ಕನಸು
ನಂತರದ್ದು ಅದನು ಸಾಧಿಸುವಾಗ
ಎದುರಾಗುವ ವಾಸ್ತವ
ಕೊನೆಯದ್ದು ಅದ ಸಾಧಿಸಲು ಹೋಗಿ
ನಮಗೆ ಸಿಕ್ಕ ಜೀವನ.

ಕಾರಣ ಜೀವನ ಅನಿರೀಕ್ಷಿತಗಳ
ಸಮ್ಮೇಳನ.

— ಗಣೇಶ

ಮನದ ಹನಿಗಳು

ಮನದ ಹನಿಗಳು

ಸುತ್ತ-ಮುತ್ತ, ಅತ್ತ-ಇತ್ತ,

ಹಾರುತಿಹವು ಎಲ್ಲೆಲ್ಲೂ

ಬಂದೆಡೆಗೆ ಅದರ ಚಿತ್ತ

ಅವುಗಳನು ಮಾಡಿ ಒಂದು

ಚಂದದೊಂದು ರೂಪ ತಂದು

ಪದಗಳಲಿ ಅವ ಹಿಡಿದಿಟ್ಟು

ಭಾವನೆಗಳ ಜೀವ ಕೊಟ್ಟು

ಎದೆಯನದಕೆ ಮುಡಿಪಿಟ್ಟು

ಕನಸಿನೂರ ದಾರಿ ತೋರಿ

ನನ್ನ ಕಂಗಳ ಬೆಳಕನಿತ್ತು

ಕವಿತೆಯಾಗಿಸುವ ಆಸೆ ನನದು.

 

— ಗಣೇಶ

ಮನಸು ಮಾತನಾಡಿದೆ….

ಎಣೆಯಿಲ್ಲದಾಗಸವ ಮನೆಯ ಮಾಡಿಕೊಂಡು,
ಅಲ್ಲೊಂದು ನಗುವ ನಕ್ಷತ್ರವಾಗುವ ಕನಸ ಕಂಡು,
ಎಲ್ಲೋ ಅಳಿದು ಮತ್ತೆಲ್ಲೋ ಬೆಳೆವ ಭಾವನೆಗಳ ಓಘ ಕಂಡು,
ಮಗುವ ಮುಖದ ಸುಂದರ ನಗುವಾಗುವ ಕಲ್ಪನೆಯನ್ನುಂಡು,
ತನ್ನೊಳಗೆ ತನ್ನನ್ನು ತಾನೇ ಕಳೆದುಕೊಂಡು
ಮನಸು ಮಾತನಾಡಿದೆ.

— ಗಣೇಶ

ನಿನಗೆ ನೆನಪಾಗಲಾರೆನೆ….. ?

ಕವಿದ ಸಂಜೆಯಲಿ,
ನಗುವ ನಕ್ಷತ್ರದಡಿಯಲ್ಲಿ,
ಸುಳಿವ ತಂಗಾಳಿಯಲಿ,
ನೀ ಏಕಾಂತದಲ್ಲಿರುವಾಗ
ನಿನಗೆ ನಾ ನೆನಪಾಗಲಾರೆನೆ…?

ಮನಸೆಲ್ಲೋ ಸುಳಿವಾಗ,
ನೀ ಹಳೆ ನೆನಪ ಹಳಿವಾಗ,
ಎಂದೋ ನಾನಾಡಿದ ಮಾತು
ಹಾಗೆ ಸುಮ್ಮನೆ ಸುಳಿದಾಗ,
ನಿನ್ನ ಕಣ್ಣಂಚಿನ ಹನಿಯಾಗಿ ನಾ ಬರಲಾರೆನೆ…?

ನಿನ್ನ ಮನದ ಪಂಜರೊದಳಗೆ
ಕೂಡಿಟ್ಟ ನೆನಪ ಹಕ್ಕಿ
ಚೀರಿ ಚೀರಿ ಬಿಡುಗಡೆಯ ಬೇಡುವಾಗ
ನಾವೀರ್ವರು ಹಾರಿದ ನೆನಪಾಗಿ
ನಿನ್ನ ನಿಟ್ಟುಸಿರಾಗಿ ನಾ ಬರಲಾರೆನೆ…?

ತಿಳಿನೀರ ಕೊಳದಲ್ಲಿ
ನೀ ಸುಮ್ಮನೆ ಕಲ್ಲ ಚೆಲ್ಲಿದಾಗ
ಮೂಡಿದಲೆಗಳ ನೀ ಎಣಿಸುತಿರುವಾಗ
ನಿನ್ನ ಬೆರಳೊಳಗೆ ಬೆಸೆಯುತ್ತಿದ್ದ
ಕೈಯ್ಯ ಬಿಸುಪಾಗಿ ನಾ ನೆನಪಾಗಲಾರೆನೆ…?

ನನ್ನೊಡನೆ ಕಳೆದ ಸಂಜೆಗಳಲಿ,
ಕೂಡಿಟ್ಟ ಹಲವು ಕನಸುಗಳಲ್ಲಿ,
ನಾ ಹಾಡಿದ್ದ ಕೆಲವು ಕವಿತೆಗಳಲಿ,
ನೀನೆ ತುಂಬಿದ್ದಾಗ, ಅದರ ನೆನಪಾಗಿ,
ನಿನ್ನ ತುಟಿಯ ಹಾಡಾಗಿ ನಾ ಗುನುಗಲಾರೆನೆ…?

ಆಗುತ್ತೇನೆ, ನೆನಪಾಗುತ್ತೇನೆ ಗೆಳತಿ
ನನ್ನಾತ್ಮ ಸಂಗಾತಿ ನಿನಗೆ ನೆನಪಾಗುತ್ತೇನೆ,
ಆದರೂ ನಿನಗೆ ಸುಳ್ಳು ಹೇಳುವಾಸೆ ಕೇಳುವಾಸೆ
ಅದಕ್ಕೇ ಕೇಳುತ್ತೇನೆ ಮತ್ತೊಮ್ಮೆ ನಿನ್ನೆದೆಯ ಹಾಡಾಗಿ
ನಿನಗೆ ನೆನಪಾಗಲಾರೆನೆ………. ?

— ಗಣೇಶ

ಕರೆಯುತ್ತಿದ್ದೇನೆ………..

ನಿನ್ನ ಕರೆದೆ,
ಕಾಯಿಸಿದೆ ನೀನು ಬರದೆ.
ನಿನ್ನ ಮಾತು ಸವಿಯೆಂದೆ,
ನೀ ಮೌನಿಯಾಗಿ ನನ್ನ ಕೊಂದೆ.

ಮನದಲ್ಲಿ ನಿನ್ನದೇ ನೆನಪಿನ ಮೋಡ,
ಆದರೆ ಹನಿಯುತ್ತಿಲ್ಲ.
ಎದೆನೆಲ ಕಾದು, ಕಾದು, ಕೆಂಡ,
ನೀ ಮಳೆಯಾಗುತ್ತಿಲ್ಲ.

ಮನಕೆ ಹಿಂದಿನ ಹಸಿರಿನದೇ ನೆನಪು,
ಅದಕೀ ಬಿರುಬಿಸಿಲು ತಿಳಿದಿಲ್ಲ.
ಅಲ್ಲೆಲ್ಲಾ ನಮ್ಮ ಪಿಸುಮಾತಿನದೆ ರಿಂಗಣ,
ಇಂದೇತಕೋ ನೀ ಮನಸು ತೆರೆಯುತ್ತಿಲ್ಲ.

ಚಂದಿರನ ಮಗಳೇ,
ಕೊಂಚ ನಾ ಹೇಳುವುದ ಕೇಳೆ.
ನಿನಗೇಕಿಷ್ಟು ಅವಸರ,
ನಾ ಹೇಳುವವರೆಗೂ ತಾಳೆ.

ನನ್ನ ಮನಸಿದೆ, ಕನಸಿದೆ, ಬದುಕಿದೆ,
ಇದೆಲ್ಲವೂ ನಿನ್ನದೇ.
ಕಾಯಿಸುತ್ತಿರುವವಳು ನೀನೆ,
ನನ್ನೆದೆಯೊಳಗೆ ಬಾರದೆ.

ಮನಸೆಂಬ ಪುಸ್ತಕವಿದೆ,
ಅದರ ಮೊದಲ ಪುಟ ಖಾಲಿಯಿದೆ,
ಅದರ ಮೂಲೆ ಮಡಚಿಟ್ಟಿದ್ದೇನೆ,
ನೀ ಬಂದು ಬರೆಯಲೆಂದೆ……….

— ಗಣೇಶ

ಹೀಗೆ ಸುಮ್ಮನೆ ಅನಿಸಿದ್ದು,

ಯಾಕೋ ಅನಿಸುವ ಮನಸಿನ ಭಾವಕೆ
ಮಾತಿನ ಹಂಗಿಲ್ಲ,

ಆಡಲು ಹೊರಟ ಮಾತಿಗೆ ಇಂದು
ಶಬ್ಧದ ನೆರವಿಲ್ಲ,

ಮನದೊಳು ಹುದುಗಿದೆ ಮಾತು ನೂರೆಂಟು,
ಅದ ಕೇಳಲೀಗ ಸಮಯ ಯಾವ ಕಿವಿಗುಂಟು ?

ಬರೆಯುವೆ ನಾ ಮನಸಿನ ಪದಗಳ
ನನ್ನೆದೆಯ ಹಾಳೆಯಲ್ಲಿ,

ಓದುವ ಹೃದಯ ಎಂದಿಗೆ ಬರುವುದೋ
ಕಂಡವರಾರಿಲ್ಲಿ ?

ಕಾದಿರುವೆ ನಾ ಪದಗಳ ಹಾಸಿ
ಆ ಹೃದಯದ ನಿರೀಕ್ಷೆಯಲ್ಲಿ………………

— ಗಣೇಶ